ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ: ಜಲಾಶಯ ಇಂದಿನ ನೀರಿನಮಟ್ಟ 110 ಅಡಿ ಕಳೆದ ನಾಲ್ಕು‌ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಕೆಆರ್‌ಎಸ್‌‍ ಜಲಾಶಯದ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ. ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ 36,674 ಕ್ಯುಸೆ‌ಕ್‌ ಒಳಹರಿವು ಇದ್ದು ನೀರಿನ ಮಟ್ಟ 110.60 ಅಡಿಗೆ ಏರಿಕೆಯಾಗಿದೆ.ಕಳೆದ ನಾಲ್ಕು‌ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಕೆಆರ್‌ಎಸ್‌‍ ಜಲಾಶಯದ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ. ನಿನ್ನೆ 107.60 ಅಡಿ ಇದ್ದ ಕೆಆರ್‌ಎಸ್‌‍ ಜಲಾಶಯದ ನೀರಿನ ಮಟ್ಟವು ಇಂದು 110.60 ಅಡಿಗೆ ತಲುಪಿದೆ. ನಿನ್ನೆ ಕೆಆರ್‌ಎಸ್‌‍ ಜಲಾಶಯದಲ್ಲಿ 29.378 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಇಂದು 32.330 ಟಿಎಂಸಿ ಅಡಿಗೆ ಏರಿಕೆಯಾಗಿದೆ.ಕೃಷ್ಣರಾಜಸಾಗರ ಜಲಾಶಯದ ಗರಿಷ್ಠ ಮಟ್ಟ ಸಾಮರ್ಥ್ಯ 124.80 ಅಡಿ ಆಗಿದೆ. ಅಂದರೆ, ಗರಿಷ್ಠ 49.452 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ. ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರೂ ಹೊರ ಹರಿವು 2,361 ಕ್ಯೂಸೆಕ್‌ನಷ್ಟಿದೆ. ಕಳೆದ 24 ಗಂಟೆಯಲ್ಲಿ ಕೆಆರ್‌ಎಸ್‌ನಲ್ಲಿ 3 ಅಡಿ ನೀರು ಹೆಚ್ಚಳವಾಗಿದೆ. ಮಂಗಳವಾರ 107.60 ಅಡಿ ಇದ್ದ ಕೆಆರ್‌ಎಸ್ ನೀರಿನ ಮಟ್ಟ ಇಂದು 110.60 ಅಡಿಗೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೆಆರ್‌ಎಸ್‌ಗೆ 3 ಟಿಎಂಸಿ ನೀರು ಹರಿದು ಬಂದಿದೆ. ಹಾರಂಗಿ ಮತ್ತು ಕಬಿನಿಯಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರ ಬಿಡುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯದ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.